ಪಿ.ವಾಸು ನಿರ್ದೇಶನದಲ್ಲಿ ಸೂಪರ್ಸ್ಟಾರ್ ಉಪೇಂದ್ರ ನಾಯಕರಾಗಿ ಅಭಿನಯಿಸಿರುವ ‘ಆರಕ್ಷಕ ಚಿತ್ರ ಮಾಸಾಂತ್ಯಕ್ಕೆ ರಾಜ್ಯಾದ್ಯಂತ ಬಿಡುಗಡೆಯಾಗುತ್ತಿದೆ. ಬಿಡುಗಡೆ ಪೂರ್ವದಲ್ಲಿ ನಿರ್ಮಾಪಕರು ವಿನೂತನಪ್ರಚಾರಕ್ಕೆ ಮುಂದಾಗಿದ್ದಾರೆ. ಇಪ್ಪತ್ತೈದು ಅಡಿ ಉದ್ದ ಹತ್ತು ಅಡಿ ಅಗಲವಿರುವ ಬಾಟಲ್ನಲ್ಲಿ ಉಪೇಂದ್ರರ ಭಾವಚಿತ್ರವಿರಿಸಿ ಬೆಂಗಳೂರಿನ ಸಾಗರ್ ಚಿತ್ರಮಂದಿರದ ಮುಂದೆ ನಿಲ್ಲಿಸುತ್ತಾರೆ. ಈ ಬಾಟಲ್ ತಯಾರಿಕೆಗೆ ಲಕ್ಷಾಂತರ ರೂಪಾಯಿ ಖರ್ಚಾಗಿರುವುದಾಗಿ ನಿರ್ಮಾಪಕ ಕೃಷ್ಣಪ್ರಜ್ವಲ್ ತಿಳಿಸಿದ್ದಾರೆ. ಉದಯರವಿ ಫ಼ಿಲಂಸ್ ಲಾಂಛನದಡಿಯಲ್ಲಿ ನಿರ್ಮಾಣವಾಗಿರುವ ಈ ಚಿತ್ರಕ್ಕೆ ಕೇರಳ, ಮೈಸೂರು, ಚೆನ್ನಪಟ್ಟಣ, ಬೆಂಗಳೂರು ಹಾಗೂ ಇಂಡೊನೇಷಿಯಾದಲ್ಲಿ ಚಿತ್ರೀಕರಣ ನಡೆದಿದೆ. ‘ಆಪ್ತಮಿತ್ರ, ‘ಆಪ್ತರಕ್ಷಕದಂತಹ ಯಶಸ್ವಿ ಚಿತ್ರಗಳ ನಿರ್ದೇಶಕರಾದ ವಾಸು ಅವರ ನಿರ್ದೇಶನದ ‘ಆರಕ್ಷಕ ಚಿತ್ರದ ಬಗ್ಗೆ ಕನ್ನಡ ಚಿತ್ರ ರಸಿಕರಲ್ಲಿ ಉತ್ತಮ ನಿರೀಕ್ಷೆಯಿದೆ. ನಿರ್ದೇಶಕರೇ ಚಿತ್ರಕ್ಕೆ ಕಥೆ, ಚಿತ್ರಕಥೆ ಹಾಗೂ ಸಂಭಾಷಣೆ ಬರೆದಿದ್ದಾರೆ. ಗುರುಕಿರಣ್ ಸಂಗೀತವಿರುವ ಚಿತ್ರಕ್ಕೆ ಪಿ.ಕೆ.ಎಚ್ ದಾಸ್ ಅವರ ಛಾಯಾಗ್ರಹಣವಿದೆ. ಸುರೇಶ್ ಅರಸ್ ಸಂಕಲನ, ವೇಣು ಕಲಾ ನಿರ್ದೇಶನ, ಡಿಫ಼ರೆಂಟ್ ಡ್ಯಾನಿ ಸಾಹಸ ನಿರ್ದೇಶನ ಮತ್ತು ಚಂಪಕಧಾಮ ಬಾಬು ನಿರ್ಮಾಣ ನಿರ್ವಹಣೆಯಿರುವ ಈ ಚಿತ್ರದ ತಾರಾಬಳಗದಲ್ಲಿ ಉಪೇಂದ್ರ, ಸೀತಾ, ಸದಾ, ರಾಗಿಣಿ, ಶಯಾಜಿ ಶಿಂಧೆ, ಶರಣ್ ಮುಂತಾದವರಿದ್ದಾರೆ.